ಭಾನುವಾರ, ಜೂನ್ 15, 2025

CBSEಯಿಂದ ಸ್ಟೇಟ್ ಬೋರ್ಡ್ ಗೆ

ಈಗೀಗ ಹೆಚ್ಚಾಗಿ ಮಕ್ಕಳು 10ನೇ ತರಗತಿಯವರೆಗೆ CBSE ಬೋರ್ಡಿನಲ್ಲಿ ಕಲಿಯುತ್ತಾರೆ. ಕೆಲವೊಂದು ವಿದ್ಯಾರ್ಥಿಗಳು ಪಿಯುಸಿಯನ್ನು ಅದೇ ಬೋರ್ಡಿನಲ್ಲಿ ಮುಂದುವರೆಸುತ್ತಾರೆ. ಹೆಚ್ಚಿನ ಮಕ್ಕಳು ಪಿಯುಸಿಗೆ ಸ್ಟೇಟ್ ಬೋರ್ಡಿಗೆ ಸೇರಿಕೊಳ್ಳುತ್ತಾರೆ. ಆಗ ಅವರಿಗೆ ಅಡ್ಮಿಷನ್ ಮಾಡಿಕೊಳ್ಳಲು ಕೆಲವೊಂದು ಪ್ರಮಾಣಪತ್ರಗಳ ಅವಶ್ಯಕತೆ ಬೀಳುತ್ತದೆ. ಅವು ಯಾವುವು? ಮತ್ತು ಎಲ್ಲಿಂದ, ಹೇಗೆ ಪಡೆಯುವುದು ತಿಳಿಯುವ.

ಮಾರ್ಕ್ಸ್ ಕಾರ್ಡ್(ಅಂಕ ಪಟ್ಟಿ)

ಮೂಲಪ್ರತಿಗಳು ದೊರಕಲು ತಿಂಗಳ ತನಕ ಕಾಯಬೇಕಾಗುತ್ತದೆ. ಫಲಿತಾಂಶ ಬರುವುದೇ ತಡವಾಗಿ. ಆದಕಾರಣ ಶಾಲೆಯಲ್ಲಿ ಮಾರ್ಕ್ಸ್ ಕಾರ್ಡಿನ ಪ್ರತಿಗೆ seal haaki, ಪ್ರಾಂಶುಪಾಲರು ಸಹಿ ಮಾಡಿ ಕೊಡುತ್ತಾರೆ. ಅದರ ಜೊತೆ ಕಂಡಕ್ಟ್ ಸರ್ಟಿಫಿಕೇಟ್ ಸಹ ಕೊಡುತ್ತಾರೆ. Admit card ನ ಪ್ರತಿ ಸಹ ಬೇಕಾಗುತ್ತದೆ.

ಆದಾಯ, ಜಾತಿ ಪ್ರಮಾಣ ಪತ್ರ

ಇದು ಬಹಳ ಅವಶ್ಯಕವಾಗಿದೆ. ಅದನ್ನು ಪಡೆಯಲು ಪಂಚಾಯತ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅದು ಒಂದು ವಾರದಲ್ಲಿ ಆನ್ಲೈನ್ ನಲ್ಲಿ ದೊರಕುತ್ತದೆ. ಅದರ ಪ್ರಿಂಟೌಟ್ ತೆಗೆದು ಕೊಡಬಹುದು.

ಮೈಗ್ರೇಶನ್ ಸರ್ಟಿಫಿಕೇಟ್

ಬೋರ್ಡ್ ಬದಲಾವಣೆ ಮಾಡುವಾಗ ಇದು ಅಗತ್ಯವಾಗಿದೆ. ಇದನ್ನು ಪಡೆಯಲು umang app ಅನ್ನು ಡೌನ್ಲೋಡ್ ಮಾಡಿ ಅದರಿಂದ ತೆಗೆದುಕೊಳ್ಳಬೇಕು. ಅದಕ್ಕೆ ಬೇಕಾದ ವಿವರಗಳನ್ನು ತುಂಬಿಸಲು admit card ಬಳಸಬೇಕು. ಶಾಲೆಯಿಂದ digilocker ನ code ಪಡೆದು ಸರ್ಟಿಫಿಕೆಟನ್ನು ಡೌನ್ಲೋಡ್ ಮಾಡಿ ನಂತರ printout ತೆಗೆಯಬೇಕು.

ಎಲಿಜಿಬಿಲಿಟಿ ಸರ್ಟಿಫಿಕೇಟ್

ಇದನ್ನು ಪಡೆಯಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ website ಗೆ ಭೇಟಿಕೊಟ್ಟು, ಅಲ್ಲಿ ಅಗತ್ಯ ವಿವರಗಳನ್ನು ತುಂಬಿಸಬೇಕು. ನಂತರ ಮಾರ್ಕ್ಸ್ ಕಾರ್ಡ್, conduct certificate, migration certificate ಗಳನ್ನು upload ಮಾಡಬೇಕು. ಅದು accept ಆದ ನಂತರ 1000 ರೂಪಾಯಿಯನ್ನು ಪೇ ಮಾಡಬೇಕು. ಬೇರೆ ಬೇರೆ ಆನ್ಲೈನ್ ವಿಧಾನಗಳಲ್ಲಿ ಪೇ ಮಾಡಬಹುದು. ನಂತರ ದೊರಕುವ reciept na printout ತೆಗೆಯಬೇಕು. ಅದರಲ್ಲಿರುವ application ID ಯನ್ನು ನೆನಪಿಡಬೇಕು. ಅದರ ಸಹಾಯದಿಂದ ಕಾಲೇಜಿನವರು ಸರ್ಟಿಫಿಕೇಟ್ ನ copy ತೆಗೆಯುತ್ತಾರೆ.

ಆಧಾರ್ ಕಾರ್ಡ್ 

ಮಕ್ಕಳ, ಹೆತ್ತವರ ಆಧಾರ್ ಕಾರ್ಡ್ ಕಾಪಿ ಕೂಡ ಬೇಕಾಗುತ್ತದೆ.

ಅಪ್ಲಿಕೇಶನ್ ಅನ್ನು ಬರ್ತಿ ಮಾಡಿ, ಅದರ ಜೊತೆ ಮೇಲಿನ ದಾಖಲೆಗಳನ್ನು ಇರಿಸಿ, ಕಾಲೇಜಿಗೆ ಸೇರಿಸಿ, ಅಗತ್ಯ ಶುಲ್ಕಗಳನ್ನು ಭರಿಸಬೇಕಾಗುತ್ತದೆ. ಎಲ್ಲ ದಾಖಲೆಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ ಅಡ್ಮಿಷನ್ ನಡೆಯುತ್ತದೆ.




ಗುರುವಾರ, ಮೇ 29, 2025

ಅಡುಗೆ ಎಂಬ ಕಲೆ

ಅಡುಗೆ ಮಾಡುವುದು, ಅದರಲ್ಲೂ ಮುಖ್ಯವಾಗಿ ಚೆನ್ನಾಗಿ ಅಡುಗೆ ಮಾಡುವುದು ಒಂದು ಕಲೆ. ಅದು ಎಲ್ಲರಿಗೂ ತಾನಾಗಿಯೇ ಒಲಿಯುವುದಿಲ್ಲ. 

ಚೆನ್ನಾಗಿ ಅಡುಗೆ ಮಾಡಲು ಅಗತ್ಯ ಅಂಶಗಳು

* ಆಸಕ್ತಿ ಬಹಳ ಮುಖ್ಯ.
* ಅಡುಗೆಯ ಬಗ್ಗೆ ಪ್ರೀತಿ, ಗೌರವ ಇರಬೇಕು
* ಸಮಯಪರಿಪಾಲನೆ ಅಗತ್ಯವಾಗಿದೆ.
* ಪದಾರ್ಥಗಳ ಗುಣವಿಶೇಷತೆಗಳ ಪರಿಚವಿರಬೇಕು. ಉದಾಹರಣೆಗೆ, ಒಂದು ತರಕಾರಿ ಯಾವ ರುಚಿ ಹೊಂದಿದೆ,? ಅದನ್ನು ಇನ್ನಷ್ಟು ರುಚಿ ಮಾಡಲು ಯಾವ ಪದಾರ್ಥ ಉಪಯೋಗಿಸಬೇಕು? ಇತ್ಯಾದಿ.
* ಉಪ್ಪು, ಹುಳಿ, ಖಾರ ಗಳು ಸಂತೋಲನದಲ್ಲಿರಬೇಕು.
*ರುಚಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಸರಿಮಾಡುವಷ್ಟು ತಿಳುವಳಿಕೆ ಬೇಕು.
* ತಾಳ್ಮೆ ಬಹಳ ಮುಖ್ಯ.
* ನಿಧಾನ ಉರಿಯಲ್ಲಿ ಅಡುಗೆ ಮಾಡುವುದರಿಂದ ರುಚಿ ಹೆಚ್ಚುತ್ತದೆ.
* ಮಸಾಲೆ ಪದಾರ್ಥಗಳನ್ನು ಚೆನ್ನಾಗಿ ಹುರಿದು ಉಪಯೋಗಿಸಬೇಕು.
*ತರಕಾರಿ ತಾಜವಾಗಿದ್ದಾಗ ರುಚಿ ಹೆಚ್ಚಿರುತ್ತದೆ.
* ಅನಿವಾರ್ಯವಾದಾಗ ಮಾತ್ರ ಕುಕ್ಕರ್ ಬಳಸಬೇಕು.
* ಮಣ್ಣಿನ ಪಾತ್ರೆಗಳು ಅಡುಗೆಯ ರುಚಿ ಹೆಚ್ಚಿಸುತ್ತವೆ.
*ಕಬ್ಬಿಣದ ಪಾತ್ರೆಗಳಲ್ಲಿ ಮಾಡಿದ ದೋಸೆ, ಪಡ್ಡು, ಚಾಪಾತಿಗಳು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು.
* ಮೈದಾ, ಸಕ್ಕರೆಗಳನ್ನು ಮಿತಿಯಲ್ಲಿ ಬಳಸುವುದು ಉತ್ತಮ.
* ಫ್ರಿಡ್ಜಿನಲ್ಲಿ ಸಂಗ್ರಹಿಸಿದ ಆಹಾರ ಪದಾರ್ಥಗಳನ್ನು ಉಪಯೋಗಿಸುವುದು ಒಳ್ಳೆಯದಲ್ಲ. ತಾಜಾ ಆಹಾರ ಪದಾರ್ಥಗಳು ಬಿಸಿಯಾಗಿದ್ದಾಗಲೇ ಸೇವಿಸಬೇಕು.
*ಅತಿಯಾಗಿ ಮಸಾಲೆ ಪದಾರ್ಥಗಳನ್ನು ಉಪಯೋಗಿಸಬಾರದು. ಅವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ.
*ಅಡುಗೆ ಮಾಡುವಾಗ ಮನಸ್ಸು ಶಾಂತವಾಗಿರಬೇಕು.

ಅಡುಗೆ ತಯಾರಿ ಮನೆಯ ಹೆಣ್ಣು ಮಕ್ಕಳ ಜವಾಬ್ದಾರಿ ಎನ್ನುವ ಕಾಲವೊಂದಿತ್ತು. ಈಗ ಹೆಣ್ಣು ಮಕ್ಕಳೂ ಹೊರಗೆ ದುಡಿಯುತ್ತಿದ್ದಾರೆ. ಆದ ಕಾರಣ ಮನೆಯವರೆಲ್ಲ ಸೇರಿ ಅಡುಗೆ ಮಾಡಿದರೆ ಒತ್ತಡವೂ ಕಡಿಮೆಯಾಗುತ್ತದೆ. ಮನೆಯವರ ನಡುವೆ, ಬಾಂಧವ್ಯ, ಹೊಂದಾಣಿಕೆ ಹೆಚ್ಚಾಗುತ್ತದೆ.

ಸೋಮವಾರ, ಮೇ 26, 2025

ಹೆತ್ತವರು ಭಾರವಾದರೆ?

ನಾವು ಈ ಭೂಮಿಗೆ ಬರಲು ಅಪ್ಪ,ಅಮ್ಮ ಕಾರಣ. ಮಗುವಾಗಿದ್ದಾಗ ನಮ್ಮನ್ನು ಚೆನ್ನಾಗಿ ಸಾಕಿ ಬೆಳೆಸಿದವರು ಅವರು. ನಮಗೆ ವಿದ್ಯೆ ಕಲಿಸಿದವರು ಅವರು. ನಮಗೆ ಬುದ್ಧಿ ಹೇಳಿ, ತಿದ್ದಿ ತೀಡಿದವರು ಅವರು. ನಾವು ಬದುಕುವ ಈ ಬದುಕೇ ಅವರು ನೀಡಿದ್ದು. 

ಆದರೆ ನಾವೀಗ ಬಹಳ ಬೆಳೆದಿದ್ದೇವೆ. ಕಲಿತಿದ್ದೇವೆ. ಮದುವೆಯಾಗಿದ್ದೇವೆ. ಮಕ್ಕಳನ್ನು ಹೊಂದಿದ್ದೇವೆ, ದುಡಿಯುತಿದ್ದೇವೆ, ಚೆನ್ನಾಗಿ ಬದುಕುತ್ತಿದ್ದೇವೆ, ಅಥವಾ ಹಾಗೆ ಭಾವಿಸಿದ್ದೇವೆ.
ನಮ್ಮ ಮಕ್ಕಳೇ ನಮ್ಮ ಪ್ರಪಂಚ, ದುಡಿಯುವುದೇ ಜೀವನದ ಗುರಿ ಎಂದೆಲ್ಲ ಯೋಚಿಸಿ ನಿನ್ನೆಗಳನ್ನು ಮರೆತಿದ್ದೇವೆ. ನಮ್ಮ ಹೆತ್ತವರನ್ನು ಕಡೆಗಣಿಸಿದ್ದೇವೆ. ಹೇಗಿದ್ದೀರಿ ಎಂದು ಕೇಳಲು ಮರೆತಿದ್ದೇವೆ. ನಾವು ಸಣ್ಣವರಿದ್ದಾಗ, ತಾವು ಉಪವಾಸವಿದ್ದು, ನಮಗೆ ಬೇಕಾದ ಸವಲತ್ತು ಕೊಟ್ಟ ಹೆತ್ತವರು ನೆನಪಿಲ್ಲ ಎಂದರೆ ಎಂತಹ ನೈತಿಕತೆ ಇದು? ಅವರ ಹತ್ತಿರ ಹೋಗಲು, ಮಾತನಾಡಲು, ಕಷ್ಟಸುಖ ವಿಚಾರಿಸಲು, ಏನು ಬೇಕು ಎಂದು ಕೇಳಲು ನಮಗೆ ಸಮಯವಿಲ್ಲವೇ? ಅಥವಾ ಮನಸಿಲ್ಲವೇ? ಅನಾರೋಗ್ಯ , ಅಸಮರ್ಥತೆ ಕಾಡುವ ಈ ವಯಸ್ಸಿನಲ್ಲಿ ಅವರು ಏನು ಮಾಡಬೇಕು? ನಮ್ಮ ನಿರ್ಲಕ್ಷ್ಯಕ್ಕೆ ಅವರ ಮನಸ್ಸು ಎಷ್ಟು ನೊಂದಿರಬಹುದು? ನಾವೀಗ ಎಚ್ಚೆತ್ತುಕೊಳ್ಳಬೇಕಿದೆ. 

* ಈ ಬದುಕು ಭಾರವಾಗದಂತೆ ನಾವು ಅವರನ್ನು ನೋಡಿಕೊಳ್ಳಬೇಕಿದೆ.
* ನಮ್ಮ ಪ್ರೀತಿ, ಕಾಳಜಿ ಅವರಿಗೆ ಬೇಕಿದೆ.
* ಅವರ ಆರೋಗ್ಯ, ಯೋಗಕ್ಷೇಮ ವಿಚಾರಿಸುವುದು ನಮ್ಮ ಕರ್ತವ್ಯ.
* ಅವರ ಮಾತನ್ನು ತಾಳ್ಮೆಯಿಂದ ಕೇಳುವುದು ನಮ್ಮ ಜವಾಬ್ದಾರಿ.
*ಅವರ ಬೇಕು, ಬೇಡಗಳನ್ನು ಗಮನಿಸಿ, ನೆರವೇರಿಸುವುದು ನಮ್ಮ ಬಾಧ್ಯತೆ.
* ಅವರನ್ನು ತುಂಬಾ ಗೌರವದಿಂದ ನೋಡಿಕೊಳ್ಳಬೇಕು.
* ಅವರು ತಮ್ಮ ಇಚ್ಛೆಯಂತೆ ನಡೆದುಕೊಳ್ಳಲು ಬಿಡಬೇಕು.
* ಅವರಿಗೆ ಬೇಕಾದ ಔಷಧಿ, ಬಟ್ಟೆ ಬರೆ,  ದಿನಸಿ ಇತರ ಖರ್ಚುಗಳನ್ನು ನಿಭಾಯಿಸಲು ಅವರಿಗೆ ಅಗತ್ಯ ಸಹಕಾರ ನೀಡಬೇಕು.
*ಅನಿವಾರ್ಯವಾದಾಗ ಅವರ ಜೊತೆ ಇರಲು ನಾವು ಸಿದ್ದವಿರಬೇಕು.
* ಅವರ ಜೀವನ ಸಂದ್ಯೆ ಖುಷಿಯಾಗಿ ಕಳೆಯುವಂತೆ ಕಾಳಜಿ ವಹಿಸಬೇಕು.
* ನಾವು ಅವರನ್ನು ನೋಯಿಸಿದರೆ, ಅದು 
ನಮ್ಮನ್ನು ಯಾವಾಗಲೂ ಮಾಡುತ್ತದೆ.

ಹೆತ್ತವರೆಂದೂ ಭಾರವಾಗುವುದು ಬೇಡ. ನಮಗೆ ಅವರ ಋಣ ತೀರಿಸುವ ಒಂದು ಸಣ್ಣ ಅವಕಾಶ ಎಂದು ತಿಳಿಯೋಣ. ನಮಗೆ ಬಾಳು ಕೊಟ್ಟವರಿಗೆ ನಾವು ಊರುಗೋಲಾಗೋಣ .



ಶನಿವಾರ, ಮೇ 24, 2025

ತೂಕ ಹೆಚ್ಚಿದೆಯೇ

ಹಿಂದೆಲ್ಲ ದುಂಡಗೆ(ದಪ್ಪವಾಗಿ) ಇರುವುದು ಬಹಳ ಲಕ್ಷಣ ಎಂದು ಭಾವಿಸುತ್ತಿದ್ದರು. ನಾವು ಅನುಕರಿಸುವ ಚಲನಚಿತ್ರದ ನಾಯಕಿಯರೂ ಸಹ ದುಂಡಗೆ ಮುದ್ದಾಗಿ ಇರುತಿದ್ದರು. ಆದರೆ ಇತ್ತೀಚಿನ ಮಾನದಂಡಗಳು ಬದಲಾಗಿವೆ. ಚಲನಚಿತ್ರಗಳ ನಾಯಕಿಯರು ತೆಳ್ಳಗೆ, ಬೆಳ್ಳಗೆ ಬಳುಕುತ್ತ ಇರಬೇಕು. ಅದೇ ಚೆಂದ ಎಂಬ ಭ್ರಮೆಯಲ್ಲಿ ನಾವಿದ್ದೇವೆ. 

ದೇಹತೂಕವು ಬರಿ ಸೌಂದರ್ಯ ದ್ಯೋತಕವಲ್ಲ. ಬದಲಾಗಿ ಅದರಲ್ಲಿ ಆರೋಗ್ಯದ ಗುಟ್ಟಿದೆ. ನಮ್ಮ ಎತ್ತರಕ್ಕೆ ಅನುಗುಣವಾಗಿ ಸಮತೂಕವನ್ನು ಹೊಂದಿರುವುದು ಅನಿವಾರ್ಯವಾಗಿದೆ. 

ಅಧಿಕ ತೂಕದ ದುಷ್ಪರಿಣಾಮಗಳು

* ಮಧುಮೇಹ ಮತ್ತು ಅಧಿಕ ರಕ್ತದೊತ್ತಡ 
ಬರುವ ಹೆಚ್ಚಿನ ಸಾಧ್ಯತೆ ಇದೆ.
* ಸ್ವಲ್ಪ ಕೆಲಸ ಮಾಡಿದರೂ ಆಯಾಸವಾಗುತ್ತದೆ.
* ಕೀಳರಿಮೆ ಉಂಟಾಗುತ್ತದೆ.
* ಸೌಂದರ್ಯ ಕಡಿಮೆಯಾದಂತೆ ಅನಿಸುತ್ತದೆ.
* ಸಮತೋಲನ ತಪ್ಪಿ ಬೀಳುವ ಸಾಧ್ಯತೆ ಹೆಚ್ಚು.

ತೂಕ ನಿಯಂತ್ರಣ ಹೇಗೆ ಸಾಧ್ಯ?

* ನಿಯಮಿತವಾಗಿ ಆಹಾರ ಸೇವಿಸಬೇಕು.
* ವಯಸ್ಸಿಗೆ ಅನುಗುಣವಾಗಿ ವ್ಯಾಮಮ ಮಾಡಬೇಕು.
* ನಾರಿನಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು.
* ಕೊಬ್ಬಿನಾಂಶ ಹೆಚ್ಚಿರುವ ಕರಿದ ತಿಂಡಿ, ಹೊರಗಿನ ಆಹಾರದ ಮೇಲೆ ನಿಯಂತ್ರಣವಿರಬೇಕು. 
* ಹೆಚ್ಚು ನೀರು ಸೇವಿಸಬೇಕು.
* ಸಿಹಿ ಪದಾರ್ಥ ಸೇವನೆಗೆ ಮಿತಿಯಿರಲಿ.
* ದುರಾಬ್ಯಾಸಗಳಿಂದ ದೂರವಿರಬೇಕು.
* ಬೆಳಿಗ್ಗೆ ಬೇಗ ಏಳಬೇಕು.
* ರಾತ್ರಿ ಬೇಗ ಮಲಗಬೇಕು.
* ದಿನವಿಡೀ ಚಟುವಟಿಕೆಯಿಂದ ಇರಬೇಕು.
* ಒತ್ತಡವನ್ನು ನಿಯಂತ್ರಣದಲ್ಲಿ ಇರಿಸಬೇಕು.

ಸಮತೂಕ ನಿರ್ವಹಣೆಯ ಪ್ರಯೋಜನಗಳು 
* ನಮಗೆ ಉತ್ತಮ ಆರೋಗ್ಯ ಹೊಂದಲು ಸಹಾಯಮಾಡುತ್ತದೆ.
* ನಮ್ಮಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
* ಚಟುವಟಿಕೆಯಿಂದ ಇರಲು ಸಹಾಯಮಾಡುತ್ತದೆ.
* ಆಕರ್ಷಕ ವ್ಯಕ್ತಿತ್ವ ಹೊಂದಲು ಕಾರಣವಾಗುತ್ತದೆ.
* ಬೇರೆಯವರ ಟೀಕೆಗಳಿಂದ ಸುರಕ್ಷಿತವಾಗಿರಲು ಸಾಧ್ಯ.

ಈ ರೀತಿ ಉತ್ತಮ ದೇಹ ತೂಕ ನಿರ್ವಹಣೆ ನಮ್ಮ ಸರ್ವತೋಮುಖ ಒಳಿತಿಗೆ ಕಾರಣವಾಗುತ್ತದೆ. ಆದ್ದರಿಂದ ಅತಿಯಾಗಿ ತಿನ್ನುವುದನ್ನು ಬಿಟ್ಟು, ಚಟುವಟಿಕೆಯಿಂದ ಇದ್ದು, ಸಮತೂಕ ಹೊಂದುವುದು ಅತೀ ಅಗತ್ಯ.


ಭಾನುವಾರ, ಮೇ 18, 2025

ಗುರು ವಂದನೆ-1

ನಮ್ಮ ಬಾಳಲ್ಲಿ ಹಲವು ಗುರುಗಳು ಬಂದಿರುತ್ತಾರೆ. ಹಾಗೆಂದು ಅವರೆಲ್ಲ ನೆನಪಿನಲ್ಲಿ ಉಳಿಯುವುದಿಲ್ಲ. ಕೆಲವರು ಮಾತ್ರ ಸದಾಕಾಲ ಮನದಾಳದಲ್ಲಿ ಬೆಳಗುವ ನಂದಾ ದೀಪದಂತೆ, ನಿರಂತರವಾಗಿರುತ್ತಾರೆ. ಸದಾ ಕಾಡುವ ಅವರಿಗೆ ಸಣ್ಣದೊಂದು ನುಡಿ ನಮನ.

ಮಿಸ್ ಯು ಟೀಚರ್

ಮೂರನೇ ತರಗತಿಯ ಕ್ಲಾಸ್ ಟೀಚರ್ ಅವರು.
ಪ್ರೀತಿಯಿಂದ ಪಾಠ ಕಲಿಸಿದ ಒಳ್ಳೆಯ ಶಿಕ್ಷಕಿ ಅವರು. ಮೊದಲ ಪರೀಕ್ಷೆ ಮುಗಿದಾಗ ತರಗತಿಗೆ ನಾಲ್ಕನೇ ಸ್ಥಾನ. ಕಲಿಕೆಯಲ್ಲಿ ಸಾದಾರಣವಾಗಿದ್ದ ನಾನು, ಖುಷಿಯಾಗಿಯೇ ಇದ್ದೆ. ಆದರೆ, ಆ ದಿನ ಟೀಚರ್ ಹೇಳಿದ ಮಾತು ಇಂದೂ ನೆನಪಿದೆ. ನಿನ್ನ ಅಣ್ಣ ಕ್ಲಾಸಿಗೆ ಫಸ್ಟ್ ಅಂತೆ, ನೀನು ಪ್ರಯತ್ನ ಮಾಡು, ಕ್ಲಾಸಿಗೆ ಫಸ್ಟ್ ಬಾ ಎಂದಿದ್ದರು. ಅವರ ಬಾಯಿ ಹರಕೆಗೋ, ನನ್ನ ಪ್ರಯತ್ನಕ್ಕೋ ಗೊತ್ತಿಲ್ಲ, ಮುಂದಿನ ಪರೀಕ್ಷೆಯಲ್ಲಿ ಕ್ಲಾಸಿಗೆ ಫಸ್ಟ್. ನನಗಿಂತ ಹೆಚ್ಚು ಅವರೇ ಸಂತಸ ಪಟ್ಟವರು ಅವರು. ಮುಂದಿನ ತರಗತಿಗೆ ಹೋದರೂ ಆಗಾಗ ಸಿಕ್ಕಾಗ ಚೆನ್ನಾಗಿ ಓದು ಎನ್ನುತ್ತಿದ್ದರು. ಆ ಶಾಲೆಯಿಂದ ಬೇರೆ ಕಡೆ ಹೋದರೂ, ಸಿಕ್ಕಾಗ ಹೇಗಿದ್ದಿ? ಓದು ಹೇಗಿದೆ ಎಂದು ವಿಚಾರಿಸುತ್ತಿದ್ದರು.

ಪದವಿ ಮುಗಿಸಿ, ಹತ್ತಿರದ ಶಾಲೆಯಲ್ಲಿ ಟೀಚರಾಗುವ ಅವಕಾಶ ಸಿಕ್ಕಿತು. ಆಗ ಭೇಟಿಯಾದಾಗ ಅವರ  ಖುಷಿಗೆ ಪಾರವೇ ಇರಲಿಲ್ಲ. ಇವಳು ನನ್ನ ವಿದ್ಯಾರ್ಥಿನಿ ಎಂದು ಎಲ್ಲರಿಗೂ ಪರಿಚಯಿಸುತ್ತಿದ್ದರು. ಅವರ ಪ್ರೀತಿ ಕಾಳಜಿಗೆ ಸರಿಸಾಟಿಯೇ ಇಲ್ಲ.

ನಾನೀಗ ಕಲಿತ ಶಾಲೆಯಿಂದ ಬಲು ದೂರದಲ್ಲಿದ್ದೇನೆ. ಅವರು ಕೆಲಸದಿಂದ ನಿವೃತ್ತರಾಗಿರಬಹುದು. ನನಗೊಂದು ನೋವಿದೆ. ಅವರ ಹೆಸರೇನೆಂದು ತಿಳಿದಿಲ್ಲ.ಅವರ ನೆನಪು ಮಾತ್ರ ಹಸಿರಾಗಿಯೇ ಇದೆ. 

ಕ್ಷಮಿಸಿ ಸಾರ್ 

ಅವರನ್ನು ಕಂಡರೆ ಎಲ್ಲ ಮಕ್ಕಳಿಗೆ ಗೌರವ ಮತ್ತು ಭಯ. ತುಂಬಾ ಚೆನ್ನಾಗಿ ಪಾಠ ಹೇಳುವ ಅವರು ಅಷ್ಟೇ ಶಿಸ್ತಿನ ವ್ಯಕ್ತಿ. ತರಗತಿಯಲ್ಲಾಗಲಿ, ತರಗತಿಯ ಹೊರಗೇ  ಆಗಲಿ ಕೈಯಲ್ಲೊಂದು ಚಾಟಿ ಹಿಡಿದು, ಗಂಭೀರವಾಗಿ ತಿರುಗುವ ಅವರ ಎದುರು ತಲೆ ಎತ್ತಲೂ ಭಯ. ಆದರೆ ತರಗತಿಯಲ್ಲಿ, ದಡ್ಡರಿಗೂ ಅರ್ಥವಾಗುವಂತೆ ವಿವರಿಸುವ ಅವರ ಕಲಿಸುವಿಕೆ ಅನನ್ಯ.

ನಾನೇನು ಅವರ ಕೈಯಲ್ಲಿ ಪೆಟ್ಟು ತಿಂದಿಲ್ಲ.ಆದರೂ ಒಂದೆರಡು ಬಾರಿ ಗದರಿದ್ದರು. ಇಂಗ್ಲಿಷ್ ಮತ್ತು ಗಣಿತದಲ್ಲಿ ಯಾಕೆ ಕಡಿಮೆ ಮಾರ್ಕು ಎಂದು. ಬಾಯಿ ಬರದವರಂತೆ ತಲೆ ತಗ್ಗಿಸಿ ನಿಂತಿದ್ದೆ. ಅವರ ಮೇಲಿನ ಭಯ ಕಡಿಮೆಯಾಗಲೆ ಇಲ್ಲ.

ಹೈ ಸ್ಕೂಲ್ ಸೇರಿದಾಗ ಒಂದೆರಡು ಬಾರಿ ದೂರದಲ್ಲಿ ಕಾಣಿಸಿದ್ದರು. ಕಲಿಸಿದ ಶಿಕ್ಷಕರು ಕಾಣಿಸಿದ ಕೂಡಲೇ ನಮಸ್ಕರಿಸುವುದು ಸಂಸ್ಕಾರ. ಆದರೆ ಅವರ ಬಗ್ಗೆ ಇದ್ದ ಭಯ, ಸಂಕೋಚ, ನಾಚಿಕೆಯಿಂದ,  ನೋಡದ ಹಾಗೆ ತಲೆ ತಗ್ಗಿಸಿ ನಡೆದಿದ್ದೆ. ಅವರು ಗಮನಿ ಸಿರಲಿಕ್ಕಿಲ್ಲ ಎಂದು ಬಾವಿಸಿದ್ದೆ . ಆಮೇಲೆ ಅವರು ಬೇರೆಯವರ ಹತ್ತಿರ, ಆ ಹುಡುಗಿಗೆ ತುಂಬಾ ಜಂಭ. ನೋಡಿದರೂ ನೋಡದಂತೆ ಹೋಗುತ್ತಾಳೆ ಎಂದಿದ್ದು ಕೇಳಿ ವಿಷಾದವಾಗಿತ್ತು.

ಕೆಲಸಕ್ಕೆ ಸೇರಿದ ಮೇಲೆ ಕಾರ್ಯಕ್ರಮದಲ್ಲಿ ಎದುರು ಸಿಕ್ಕಾಗ ನಮಸ್ಕರಿಸಲು ಹೋದಾಗ, ಅಪರಿಚಿತರಂತೆ ನಡೆದಿದ್ದರು . ಅವರು ಹಳೆಯ ವಿಷಯ ಮರೆತಿಲ್ಲ ಎಂಬುದು ಸ್ಪಷ್ಟವಾಗಿತ್ತು.

 ದಯವಿಟ್ಟು ಕ್ಷಮಿಸಿ ಸರ್. ನಾನೇನು ದುರಹಂಕಾರಿ ಅಲ್ಲ.ಸಂಕೋಚದಿಂದ ಮಾತನಾಡಿಸಲಿಲ್ಲ ಅಷ್ಟೇ.

ಭಾನುವಾರ, ಡಿಸೆಂಬರ್ 1, 2024

ಮಾತು ಮುತ್ತು

 "ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು".

"ಮಾತೇ ಮುತ್ತು , ಮಾತೇ ಮೃತ್ಯು"
"ಮಾತು ಬಂಗಾರ, ಮೌನ ಬೆಳ್ಳಿ "

ಜೀವಜಗತ್ತಿನ ಮಾತನಾಡುವ ಏಕೈಕ ಜೀವಿ ಮನುಷ್ಯ
ಮಾನವರಾದ ನಮಗಿರುವ ವಿಶೇಷತೆಯೇ ಮಾತು. ನಮ್ಮ ಮನಸನ್ನು, ಭಾವನೆಯನ್ನು ಬೇರೆಯವರ ಮುಂದಿಡುವ ಸುಲಭ ಸಾಧನ ಈ ಮಾತು. ಅದನ್ನು ಯಾವ ರೀತಿ ಉಪಯೋಗಿಸುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ.

ಒಳ್ಳೆಯವರ ಮಾತು ಮುತ್ತು 

  • ಒಳ್ಳೆಯವರ ಮಾತು ಯಾವಾಗಲೂ ಉತ್ತಮವಾಗಿರುತ್ತದೆ. 
  • ಅವರು ಕಡಿಮೆ ಮಾತನಾಡುತ್ತಾರೆ. ಅದಕ್ಕೆ ಹೆಚ್ಚು ಅರ್ಥವಿರುತ್ತದೆ.
  • ಅವರು ಯಾರನ್ನು ನೋಯಿಸುವುದಿಲ್ಲ. 
  • ಸರಿಯಾಗಿ ಯೋಚಿಸಿ, ಚಿಂತಿಸಿ ನಿಧಾನವಾಗಿ ಮಾತನಾಡುತ್ತಾರೆ.
  • ಇನ್ನೊಬ್ಬರ ಬಗ್ಗೆ ಚಾಡಿ ಹೇಳುವುದು, ಹಿಂದಿನಿಂದ ಮಾತನಾಡುವುದು ಅವರಿಗೆ ಇಷ್ಟವಾಗುವುದಿಲ್ಲ.
ಕೆಟ್ಟವರ ಮಾತುಗಳು 

  •  ಕೆಟ್ಟವರು ಮಾತು ಶುರು ಮಾಡಿದರೆ ಅದನ್ನು ಕೇಳಲಾಗುವುದಿಲ್ಲ. ಕಿವಿ ಮುಚ್ಚುವ ಎಂದೆನಿಸುತ್ತದೆ.
  • ಇವರು ಯಾವಾಗ ಬಾಯಿ ಮುಚ್ಚುತಾರೆ  ಎಂದು ಕಾಯುವಂತೆ ಆಗುತ್ತದೆ. 
  • ಅವರ ಬಾಯಲ್ಲಿ ಒಳ್ಳೆಯ ಮಾತು ಬರುವುದಿಲ್ಲ. 
  • ಒಂದೋ ಚಾಡಿ ಹೇಳುತ್ತಾರೆ, ಇಲ್ಲ ಯಾರಿಗೋ ಬಯ್ಯುತ್ತಿರುತ್ತಾರೆ , 
  • ಇಲ್ಲ ಬೇಡದ ವಿಚಾರ, ಅವರಿವರ ಮನೇ ಸುದ್ದಿ  ಮಾತನಾಡಿ ಮನೆ ಹಾಳು ಮಾಡುತ್ತಿರುತ್ತಾರೆ. 
  • ಅವರಿಗೆ ಬುದ್ಧಿಯಿಲ್ಲ. ನಮಗೆ ನೆಮ್ಮದಿ ಇಲ್ಲ.
  • ದಿನಾ ಅದೇ ಮಾತು ಕೇಳುತ್ತಿದ್ದರೆ ನಾವು ಅವರಂತೆ ಆಗುತ್ತೇವೆ. 

ಅದಕ್ಕೆ ನಾವು ಯಾವಾಗಲೂ ಉತ್ತಮರ ಸಂಗ ಮಾಡಬೇಕು. ಎಲ್ಲರಿಗೂ ಇಷ್ಟವಾಗುವ ಒಳ್ಳೆಯ ಮಾತನ್ನಾಡಿ ನಾವು ನೆಮ್ಮದಿಯಾರೋಣ. ಇತರರನ್ನೂ ನೆಮ್ಮದಿಯಾಗಿ ಬದುಕಲು ಬಿಡೋಣ.








ಮಿಕ್ಕಿ

ಮಿಕ್ಕಿ ಬಿಲ್ಲಿಯ ಮಗ.  ಅವಳು ಎರಡು ಮಕ್ಕಳಲ್ಲಿ ಒಬ್ಬ. ಬೆಕ್ಕುಗಳ ಬಗ್ಗೆ ಹೆಚ್ಚಿನೂ ಗೊತ್ತಿಲ್ಲದ,ಇಷ್ಟವೂ ಇಲ್ಲದ ನಾನು ಅವನ ಬಗ್ಗೆ ಗಮನಹರಿಸಿರಲಿಲ್ಲ. ಕನಿಷ್ಠ ಪಕ್ಷ ಬಿಲ್ಲಿಯ ಮಕ್ಕಳ ಮುಖ ನೋಡಲೂ ಹೋಗಲಿಲ್ಲ. ಹಳೆಯ ಬಾರಿ ನನಗಾದ ಅನುಭವ ಮರಿಗಳ ಮುಖ ನೋಡಲೂ ಇಷ್ಟವಿಲ್ಲದಂತೆ ಮಾಡಿತ್ತು.

ಕಳೆದ ಬಾರಿ ಬಿಲ್ಲಿ ಮರಿ ಇಟ್ಟಾಗ ಬೆಂಚಿನ ಮೇಲೆ ಮರಿಗಳನ್ನು ಇಟ್ಟು ಕುಳಿತಿದ್ದಳು . ಒಂದು ಮರಿ ತಪ್ಪಿ ಕೆಳಗೆ ಬಿದ್ದು ಒದ್ಧಾಡುತಿತ್ತು. ಅದರ ಕೂಗು ಕೇಳಿ ಬಂದ ನಾನು, ಅಯ್ಯೋ ಪಾಪ ಎಂದು ಮರಿಯನ್ನು ಎತ್ತಿ ಬೆಂಚಿನ ಮೇಲೆ ಇಟ್ಟೆ. ಬಿಲ್ಲಿ ಮರಿಯನ್ನು ಮೂಸಿ ನೋಡಿ, ತನ್ನ ಇನ್ನೊಂದು ಮರಿಯ ಜತೆ ಬೇರೆ ಕಡೆ ಹೊರಟು ಹೋದಳು. ಈ ಮರಿ ಜೋರಾಗಿ ಕೂಗುತ್ತಿತ್ತು. ನಾನು ಪುನಃ ಮರಿಯನ್ನು ಎತ್ತಿ ಕೊಂಡು ಹೋಗಿ ಅವಳ ಬಳಿ ಬಿಟ್ಟೆ. ಅವಳು ಮತ್ತೆ ಜಾಗ ಬದಲಾಯಿಸಿದಳು. ನನಗೆ ತಲೆ ಬಿಸಿಯಾಯಿತು. ಬಿದ್ದು ಏಟಾಗಿದ್ದಕ್ಕೋ, ನಾನು ಮುಟ್ಟಿದ್ದಕ್ಕೋ ಬಿಲ್ಲಿ ಮರಿಯನ್ನು ಮೂಸಲೂ ಇಲ್ಲ. ಹಾಲು ಕುಡಿಸಲೂ ಇಲ್ಲ. ಆ ಮರಿ ಸತ್ತೇ ಹೋಯಿತು. ಅದು ನನ್ನನ್ನು ಬಹಳ ಕಾಡಿತು.


ಈ ಸಲ ಏನಾದರಾಗಲಿ ಎಂದು ಆ ಮರಿಗಳ ಮುಖ ನೋಡಲೂ ಹೋಗಲಿಲ್ಲ.ಮರಿಗಳು ಸ್ವಲ್ಪ ದೊಡ್ಡದಾಗಿ, ಮನೆ ತುಂಬಾ ಓಡಾಡಲು ಶುರು ಮಾಡಿದವು. ಊಟಕ್ಕೆ ಕುಳಿತಾಗ ಹತ್ತಿರ ಬಂದು ಕುಳಿತು ಮೀಯಾಂ ಎನ್ನುತಿದ್ದವು.ನಾನು ಕಿವಿ ಕೇಳಿದಂತೆ ನಟಿಸುತಿದ್ದೆ. ನೋಡಿಯೂ ನೋಡದಂತೆ ಇರುತ್ತಿದ್ದೆ. ಒಮ್ಮೆ ಊಟ ಮಾಡುತ್ತಿದ್ದಾಗ ನನ್ನ ಹತ್ತಿರ ಕೂತಿದ್ದ ಮಿಕ್ಕಿ ಎದ್ದು ನಿಂತು ನನ್ನ ಕಾಲಿಗೆ ತನ್ನ ಮುಖವನ್ನು ಉಜ್ಜತೊಡಗಿದ. ನಾನು ಅದನ್ನು ದೂರ ಕಳಿಸಿದೆ. ಮತ್ತೆ ಹತ್ತಿರ ಬಂದು ಕುಳಿತು ಮೀಯಾಂ ಎನ್ನುತ್ತ ಮಡಿಲು ಏರಿ ಕುಳಿತಿತು. ಎಷ್ಟೇ ಜೋರು ಮಾಡಿದರೂ ಕೆಳಗೆ ಇಳಿಯಲಿಲ್ಲ. ಆ ನಂತರ ಪ್ರತಿ ದಿನ ಹಾಗೆ ಮಾಡುತಿತ್ತು. ಕೆಳಗೆ ಕುಳಿತರೆ ಸಾಕು, ಓಡಿ ಬಂದು ಮಡಿಲಿನಲ್ಲಿ ಕುಳಿತುಕೊಳ್ಳುತಿತ್ತು. ನನಗೇ ಗೊತ್ತಿಲ್ಲದಂತೆ ಮಿಕ್ಕಿ ನನ್ನ ಮನಸಿಗೆ ಹತ್ತಿರವಾದ. ಅವನಿಗೆ ನನ್ನನ್ನು ಕಂಡರೆ ಇಷ್ಟ, ನನಗೂ ಅ‌ಷ್ಟೇ.

ಅಷ್ಟರಲ್ಲೇ ಮದುವೆ ನಿಶ್ಚಯವಾಯಿತು. ಅವನ ಮತ್ತು ನನ್ನ ಒಡನಾಟ ಹಾಗೆ ಮುಂದುವರೆಯಿತು. ಮದುವೆ ತಯಾರಿಯಲ್ಲಿ ದಿನಗಳುರುಳಿ , ಎಲ್ಲ ಗದ್ದಲ ಮುಗಿಸಿ ಗಂಡನ ಮನೆಗೆ ಹೋದ ಮೇಲೆ, ಅಲ್ಲಿನ ಹೊಸ ವಾತಾವರಣದಲ್ಲಿ ನಾನು ಮಿಕ್ಕಿಯನ್ನು ಮರೆತೇ ಬಿಟ್ಟೆ. ಸ್ವಲ್ಪ ದಿನಗಳ ನಂತರ ಮತ್ತೆ ಮನೆಗೆ ಹೋದಾಗಲೂ ಮಿಕ್ಕಿ ಓಡಿ ಬಂದ. ಮಾಮೂಲಿಗಿಂತ ಹೆಚ್ಚು ನನಗೆ ಅಂಟಿಕೊಂಡ.ಎರಡು ದಿನಗಳ ನಂತರ ತಿರುಗಿ ಹೊರಟಾಗ ಹೊರ ಜಗುಲಿಯಲ್ಲಿ ಕುಳಿತು ನನ್ನನ್ನೇ ನೋಡುತ್ತಿದ್ದ.  ಬೇಸರವಾಯಿತು...

ಮುಂದಿನ ಬಾರಿ ಹೋದಾಗ ಮಿಕ್ಕಿ ಎಲ್ಲೂ ಕಾಣಲಿಲ್ಲ. ಅಮ್ಮನನ್ನು ಕೇಳಿದಾಗ, ನೀನು ಕಳೆದ ಸಾರಿ ಬಂದು ಹೋದ ಮೇಲೆ, ಅವನು ಎಲ್ಲೂ ಕಾಣ್ತಾ ಇಲ್ಲ ಎಂದು ಹೇಳಿದಾಗ ನನ್ನ ಹೃದಯ ಭಾರವಾಯಿತು. ಅವನ ನೆನಪಾದಾಗ ಕಣ್ಣು ತುಂಬಿ ಬರುತ್ತದೆ. ಮಿಸ್ ಯು ಮಿಕ್ಕಿ...!

ಎಲ್ಲಿದೆ ನೆಮ್ಮದಿ?


ಬದುಕಿಗೆ ನೆಮ್ಮದಿ ಬಹಳ ಮುಖ್ಯ. ಅದನ್ನು ಖರೀದಿಸಲು ಸಾದ್ಯವಿಲ್ಲ. ಹಾಗಾದರೇ ಅದು ಎಲ್ಲಿದೆ?
ಎಷ್ಟು ಹಣವಿದ್ದರೇನು? ತಿನ್ನಲಾಗುವುದಿಲ್ಲ, ಅಲ್ಲವೇ? ಹೊಟ್ಟೆ ಹಸಿದಾಗ ಊಟ ಬೇಕು, ಬಾಯಾರಿದಾಗ ನೀರು ಬೇಕು, ಉಸಿರಾಡಲು ಶುದ್ಧ ಗಾಳಿ ಬೇಕು, ಇವೆಲ್ಲ ಮಾಡಲು ಆರೋಗ್ಯ ಬೇಕು. ಉತ್ತಮ ಆರೋಗ್ಯಕ್ಕಾಗಿ ಏನು ಬೇಕು?

ಮನಸಿಗೆ ನೆಮ್ಮದಿ ಬೇಕು. ಅದು ನೆಮ್ಮದಿಯಾಗಿ ಇದ್ದರೆ ಆರೋಗ್ಯ ಚೆನ್ನಾಗಿ ಇರುತ್ತದೆ. 

ಮನಸನ್ನು ಚೆನ್ನಾಗಿ ಇಟ್ಟುಕೊಳ್ಳಲು 

1.ಕೋಪ ಕಡಿಮೆ ಮಾಡಬೇಕು. ಅದಕ್ಕಾಗಿ
*ದೀರ್ಘವಾಗಿ ಉಸಿರಾಡಿ.
*ಒಂದರಿಂದ ನೂರರವರೆಗೆ ನಿಧಾನವಾಗಿ ಎಣಿಸಿ.
*ಮೌನವಾಗಿ ಕುಳಿತುಕೊಳ್ಳಿ.
*ಕೋಪಕ್ಕೆ ಕಾರಣವೇನೆಂದು ಯೋಚಿಸಿ.
*ಕಾರಣ ಚಿಕ್ಕದೆಂದು ಅರ್ಥವಾದಾಗ ಮನಸು ತಿಳಿಯಾಗುವುದು.
2.ಅತಿಯಾಸೆಯನ್ನು ಬಿಟ್ಟು ಇರುವುದರಲ್ಲಿ ಖುಷಿಯಾಗಿ ಇರಬೇಕು
3.ಇನ್ನೊಬ್ಬರನ್ನು ನೋಡಿ ಹೊಟ್ಟೆಕಿಚ್ಚು ಪಡುವ ಬದಲು ನಾವು ಅವರಿಗೆ ಒಳಿತನ್ನು ಬಯಸಬೇಕು.
4.ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು.
5.ಕಷ್ಟಪಟ್ಟು ದುಡಿಯುವ ಮನಸಿರಬೇಕು.
6.ದೇವರ ಮೇಲೆ ದೃಢವಾದ ನಂಬಿಕೆ, ಭಕ್ತಿ ಇರಬೇಕು.
7.ಸಕಾರಾತ್ಮಕ ಚಿಂತನೆಗಳನ್ನು ಮಾಡಬೇಕು.
8.ಎಲ್ಲರಿಗೂ ಒಳಿತನ್ನು ಬಯಸುವ ಒಳ್ಳೆಯ ಮನಸಿರಬೇಕು.
9.ಬೇರೆಯವರನ್ನು ತನ್ನಂತೆ ಭಾವಿಸಬೇಕು .
10.ತನ್ನವರನ್ನು ಮಾತ್ರವಲ್ಲ ಇತರನ್ನು ಗೌರವಿಸಬೇಕು.
11.ಯಾರಿಗೂ ಕೇಡು ಮಾಡಬೇಡಿ, ಆಗ ಅವರು ನಮಗೆ ತೊಂದರೆ ಕೊಡುತ್ತಾರೆ ಎಂಬ ಭಯವಿರುವುದಿಲ್ಲ.
12.ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ ಮುಂತಾದವು ಮನಸನ್ನು ತಿಳಿಗೊಳಿಸುತ್ತವೆ.
13.ಮಾಡುವ ಕೆಲಸದ ಬಗ್ಗೆ ಮುಂದಾಲೋಚನೆ ಇರಲಿ.
14.ಪ್ರತಿ ಹೆಜ್ಜೆ ಇಡುವ ಮುನ್ನ ಹತ್ತು ಬಾರಿ ಯೋಚಿಸಿ.
15.ಮಾತು ಮುತ್ತಿನಂತಿರಲಿ. ಹಿತವಾಗಿರಲಿ.

ಹೀಗೆ ನಾವು ಒಳ್ಳೆಯ ಮನಸಿನಿಂದ ಯೋಚಿಸಿದರೆ ಎಲ್ಲವೂ ಒಳ್ಳೆಯದಾಗಿ ಕಾಣಿಸುತ್ತದೆ. ನೆಮ್ಮದಿ ತಾನೆ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಒಳ್ಳೆಯ ಆರೋಗ್ಯ, ನಿದ್ದೆ ಸಂತೃಪ್ತಿ ನಮ್ಮದಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.






ಶನಿವಾರ, ನವೆಂಬರ್ 16, 2024

ವಿಚ್ಚೇದನಗಳ ಕಾರಣ,ಪರಿಹಾರ

 ಹಿಂದಿನ ಕಾಲದಲ್ಲಿ ವಿಚ್ಚೇದನದ ಕಾರಣ ಮತ್ತು ಪರಿಣಾಮಗಳು

ಹಿಂದೆಲ್ಲ ಅವಿಭಕ್ತ ಕುಟುಂಬಗಳು ಇತ್ತು.ಮನೇ ತುಂಬಾ ಜನರಿದ್ದರು. ಮನೆಯ ಹಿರಿಯರು ಪ್ರತೀ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಮಾತು ಮೀರುವ ದೈರ್ಯ ಯಾರಿಗೂ ಇರಲಿಲ್ಲ.ಅದು ಬರೀ ಭಯ ಮಾತ್ರ ಅಲ್ಲ, ಗೌರವವೂ ಇತ್ತು. ಅಂತಹ ಕಾಲದಲ್ಲಿ ವಿಚ್ಛೇದನಗಳು ಬಲು ಅಪರೂಪ. ಕೆಲವೊಂದು ಬಾರಿ ಪರಿಸ್ಥಿತಿಗಳು ಕೈಮೀರಿ ಪತಿಪತ್ನಿ ದೂರಾಗುತ್ತಿದ್ದರು. ತಪ್ಪು ಯಾರದ್ದೇ ಆಗಿದ್ದರೂ, ಗಂಡ ಬಿಟ್ಟವಳು ಎಂಬ ಹಣೆಪಟ್ಟಿ ಹೆಣ್ಣಿನ ಪಾಲಿಗೆ ಕಾಯಂ ಆಗಿ ಇರುತಿತ್ತು. ಆಮೇಲಿನ ಅವಳ, ಅವಳ ಮಕ್ಕಳ ಜೀವನ ನರಕಸದೃಶ್ಯವಾಗಿರುತಿತ್ತು. ಅವಳಿಗೆ ತವರು ಮನೆಯಲ್ಲಿ ಯಾವ ಆದರವೂ ಸಿಗುತ್ತಿರಲಿಲ್ಲ. ಕಾರಣ,ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬುದು ಬರೀ ಗಾದೆಮಾತಾಗಿರದೆ ನಿಜವೆಂದೇ ನಂಬಿದ ಕಾಲವದು.ಅದು ಅನಿವಾರ್ಯವೂ ಆಗಿತ್ತು. ಮನೆ ತುಂಬ ಮಕ್ಕಳು. ಅವರ ಹೊಟ್ಟೆಬಟ್ಟೆ ನೋಡಿಕೊಳ್ಳುವುದೇ ದೊಡ್ಡ ಸಾಹಸ. ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಸಾಕಪ್ಪಾ ಸಾಕು, ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಅವರು ತಿರುಗಿ ಮನೆಗೆ ಬಂದರೆ ಹೇಗಿರಬೇಡ!? ಎಲ್ಲರೂ ಪರಿಸ್ಥಿತಿಯ ಕೈಗೊಂಬೆಗಳಾಗಿರುತಿದ್ದರು. ತಮ್ಮ ಮನೆಯ ವಾಸ್ತವ ಪರಿಸ್ಥಿತಿ ಅರಿತಿದ್ದ ಹೆಣ್ಣು ಮಕ್ಕಳು, ತವರು ಮನೆಯ ದಾರಿ ಮರೆತವರಂತೆ, ಎಲ್ಲ ಕಷ್ಟ ನುಂಗಿಕೊಂಡು, ಎಲ್ಲರ ಜೊತೆ ಹೊಂದಿಕೊಂಡು ಹೇಗೋ ಬಾಳುತ್ತಿದ್ದರು. ನೂರರಲ್ಲಿ ಒಬ್ಬರು ಸುಖವಾಗಿಯೂ ಇದ್ದರು. 

ಇಂದಿನ ಕಾಲದ ವಿಚ್ಚೇದನಗಳ ಕಾರಣಗಳು

ಈಗ ಕಾಲ ಬದಲಾಗಿದೆ. ಎಲ್ಲೆಲ್ಲು ವಿಭಕ್ತ ಕುಟುಂಬಗಳು. ಓದಿ, ಕೆಲಸ ಪಡೆದು ಅಚ್ಚು ಕಟ್ಟಾಗಿ ಮನೆ ಮಾಡಿಕೊಂಡು ತಮ್ಮ ಪಾಡಿಗೆ ತಾವಿರುವ ಕುಟುಂಬಗಳು. ಒಂದೋ ಎರಡೋ ಮಕ್ಕಳು.

  •  ಅತಿ ಮುದ್ದಿನಿಂದ ಬೆಳೆಸಿ, ಓದಿಸಿ, ಬೇಕಾದ್ದು ಕೊಡಿಸಿ, ಕಷ್ಟ,ನಷ್ಟ, ಹೊಂದಾಣಿಕೆ ಅರಿಯದೆ ಬೆಳೆದ ಮಕ್ಕಳು, ಅದೇ ಜೀವನ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ.
  •  ತುಸು ಏರುಪೇರಾದರೂ ಸಹಿಸುವ ಶಕ್ತಿ ಅವರಿಗಿಲ್ಲ.  
  •  ತನ್ನದೇ ಮಾತು ನಡೆಯಬೇಕೆಂಬ ಹಟ, ಅಹಂ. 
  • ಸಾಮಾಜಿಕ ಜಾಲತಾಣಗಳ ಪ್ರಭಾವಿತರಾಗಿ, ಚಂಚಲ ಮನಸಿನಿಂದ ಆಕರ್ಷಣೆ, ಆಮಿಷಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. 
  • ಯಾವುದೇ ಮುಂದಾಲೋಚನೆ ಇಲ್ಲದೆ ಮಾಡಿದ ತಪ್ಪುಗಳಿಗೆ ಬೆಲೆ ತೆರುತ್ತಿದ್ದಾರೆ.
  •  ಕೆಲವೊಂದು ಬಾರಿ ಅತಿಯಾಸೆಗೆ ಬಲಿಯಾಗುತ್ತಾರೆ. 
  • ಪರಸ್ಪರರ ಬಗ್ಗೆ ಇರುವ ಅಪನಂಬಿಕೆಯೂ ವಿಚ್ಛೇದನದ ಪ್ರಮುಖ ಕಾರಣಗಳಲ್ಲಿ ಒಂದು. 
  • ಗಂಡ ಮತ್ತು ಮಕ್ಕಳು ಮಾತ್ರ ತನ್ನ ಸಂಸಾರ ಎನ್ನುವ ಸ್ವಾರ್ಥಿ ಹೆಣ್ಣುಮಕ್ಕಳು, 
  • ಮದುವೆ ಆದ ಮೇಲೆ ,ನೀನು ನಿನ್ನ ಮನೆಯವರನ್ನು ನಿನ್ನ ಸ್ವಂತಿಕೆಯನ್ನು ಮರೆತುಬಿಡು ಎನ್ನುವ ಗಂಡಸರು. 
ವಿವಾಹೇತರ ಸಂಬಂಧಗಳು ಕೂಡ ಪ್ರಮುಖ ಕಾರಣ. ಅದು ಸಂಸಾರಗಳನ್ನು ಒಡೆಯದೆ ಬಿಡುವುದಿಲ್ಲ.

ವಿಚ್ಚೇದನವನ್ನು ಕಡಿಮೆ ಮಾಡಲು ಉಪಾಯಗಳು

  •   ಗಂಡು ಮಕ್ಕಳು ಹೆಣ್ಣನ್ನು ತನ್ನಂತೆ ಗೌರವಿಸಲು ಕಲಿಯಬೇಕು. 
  • ಅವರ ಆಸೆ ಆಕಾಂಕ್ಷೆಗಳನ್ನು ತಿಳಿದು ಅದಕ್ಕೆ ಬೆಂಬಲಿಸಬೇಕು. 
  • ಎಲ್ಲ ಕೆಲಸಗಳನ್ನು ಅವರ ಜೊತೆ ಹೊಂದಿಕೊಂಡು ಮಾಡಬೇಕು. 
  • ಹೆಣ್ಣು ಮಕ್ಕಳು, ತಮ್ಮ ಗಂಡನನ್ನು ಮತ್ತು ಅವರ ಮನೆಯವರನ್ನು ತಮ್ಮ ಸ್ವಂತದವರಂತೆ ಪ್ರೀತಿಸಲು, ಗೌರವಿಸಲು ಕಲಿಯಬೇಕು. 
  • ತಮ್ಮ ಗಂಡನ ಇತಿಮಿತಿಗಳನ್ನು ಅರಿತು ಅದಕ್ಕೆ ತಕ್ಕಂತೆ ಹೊಂದಿಕೊಂಡು ಬದುಕಬೇಕು. 
  • ಜೀವನಸಂಗಾತಿಯ ಭಾವನೆಗಳನ್ನು, ಅಭಿರುಚಿಗಳನ್ನು ಗೌರವಿಸಬೇಕು. 
  • ಬಿನ್ನಾಭಿಪ್ರಾಯಗಳು ಸಹಜ. ತನ್ನದೇ ಹಟ ಸಾದಿಸದೆ ಅನುಸರಿಸಿಕೊಂಡು ಹೋಗಬೇಕು. 
  • ಯಾವುದೇ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ, ತಮ್ಮ ಹೆತ್ತವರ ಬಗ್ಗೆ, ಮಕ್ಕಳ ಭವಿಷ್ಯದ ಬಗ್ಗೆ ಸರಿಯಾಗಿ ಯೋಚಿಸಬೇಕು. 
  • ತಮ್ಮ ಒಂದು ನಿರ್ಧಾರದಿಂದ ಆಗುವ ಪರಿಣಾಮಗಳ ಬಗ್ಗೆ ಸರಿಯಾಗಿ ಯೋಚಿಸಬೇಕು. 
ಇರುವುದೊಂದೇ ಜೀವನ. ಅದನ್ನು ಮಾಡೋಣ ಪಾವನ.



















ಹದಿಹರೆಯ- ಮಕ್ಕಳು ಮತ್ತು ಹೆತ್ತವರು

ಹದಿಹರೆಯ ಎನ್ನುವುದು ಪ್ರತಿಯೊಬ್ಬರ ಜೀವನದ ಅತೀ ಮುಖ್ಯ ಘಟ್ಟ. ನಾವು ಮುಂದೆ ಏನಾಗುತ್ತೇವೆ ಎಂಬುದನ್ನು ನಿರ್ಧರಿಸುವ ಸಮಯ. ಸರಿಯಾದ ಮಾರ್ಗದರ್ಶನ ದೊರೆತರೆ ಉತ್ತಮ ಭವಿಷ್ಯ ರೂಪುಗೊಳ್ಳುತ್ತದೆ. ಆದ್ದರಿಂದ ಹೆತ್ತವರಿಂದ,ಗುರುಹಿರಿಯರಿಂದ, ಸ್ನೇಹಿತರಿಂದ ಸರಿಯಾದ ಸಲಹೆಗಳು ಸಿಗುವುದು ತುಂಬಾ ಅವಶ್ಯಕ. 

 ಹದಿಹರೆಯದಲ್ಲಿ ಮಕ್ಕಳ ಮನಸ್ಸು ಮೃದುವಾದ ಮಣ್ಣನಂತಿರುತ್ತದೆ. ನಾವು ಯಾವ ಆಕಾರ ನೀಡುತ್ತೇವೋ ಅದೇ ಆಕಾರ ತಳೆಯುತ್ತದೆ. ಒಂದು ಉತ್ತಮ ಮೂರ್ತಿಯಾಗಿಯೂ ಮಾಡಬಹುದು. ಉಪಯೋಗವೇ ಇಲ್ಲದಂತೆ ಹಾಳಾಗಬಹುದು. ಆದ್ದರಿಂದ ಎಚ್ಚರಿಕೆ ಅಗತ್ಯ. 

ಹದಿಹರೆಯದ ಮಕ್ಕಳ ಮನಸ್ಥಿತಿ

  •  "ಹುಚ್ಚುಕೋಳಿ ಮನಸ್ಸು, ಅದು ಹದಿನಾರರ ವಯಸ್ಸು" ಹಾಡಿನ ಸಾಲಿನಂತೆ, ಮಕ್ಕಳ ಮನಸ್ಸು ಸೂಕ್ಷ್ಮವಾಗಿ, ಚಂಚಲವಾಗಿ, ಮುಗ್ದವಾಗಿ, ಅಪಕ್ವವಾಗಿ ಇರುತ್ತದೆ. 
  • ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯುವ ತಾಳ್ಮೆಯಾಗಲಿ,ಪ್ರಬುದ್ಧತೆಯಾಗಲಿ ಅವರಿಗಿರುವುದಿಲ್ಲ. 
  •  ಬುದ್ಧಿಮಾತು ಕೇಳುವ ಮನಸ್ಥಿತಿಯೂ ಅವರಿಗಿರುವುದಿಲ್ಲ.
  •  ನಾವು ಏನಾದ್ರೂ ಹೇಳಲು ಹೋದರೆ, ಒಂದೋ ಸುಮ್ಮನಿರುತ್ತಾರೆ, ಅಥವಾ ಕೇಳದವರಂತೆ ನಟಿಸುತ್ತಾರೆ, ಅಥವಾ ನನಗೆ ಏನೂ ಹೇಳಲು ಬರಬೇಡಿ ಎನ್ನುತ್ತಾರೆ. 
  • ಆ ಕಡೆ ದೊಡ್ಡವರೂ ಅಲ್ಲ, ಈ ಕಡೆ ಸಣ್ಣವರೂ ಅಲ್ಲ. ಅವರಿಗೆ ಏನು ಹೇಳಬೇಕು, ಹೇಗೆ ಹೇಳಬೇಕು, ಎಷ್ಟು ಹೇಳಬೇಕು ಎಂದು ತಿಳಿಯದೆ ಅಪ್ಪ ಅಮ್ಮ ಗೊಂದಲಕ್ಕೆ ಒಳಗಾಗುತ್ತಾರೆ. 
  • ಅವರು ಗಳಿಸಿದ ಎಲ್ಲ ಅನುಭವಗಳನ್ನು ಉಪಯೋಗಿಸಿದರೂ, ಈ ಮಕ್ಕಳನ್ನು ಸಂಭಾಳಿಸುವುದು ಹೇಗೆ ಎಂದು ತಿಳಿಯುದಿಲ್ಲ.
  • ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು, ಅದಕ್ಕೆ ಹೊಂದಿಕೊಳ್ಳಲು ಅವರು ಹರಸಾಹಸ ಪಡುತ್ತಿರುತ್ತಾರೆ. 
  •  ಒಂದು ಕಡೆ ಬೇರೆ ಬೇರೆ ರೀತಿಯ ಆಕರ್ಷಣೆಗಳು ಅವರನ್ನು ಸೆಳೆಯುತ್ತವೆ.
  • ಓದುವ ಒತ್ತಡಗಳು ಹೆಚ್ಚಿರುತ್ತವೆ
  • ಹೆತ್ತವರ ನಿರೀಕ್ಷೆಗಳನ್ನು ಮುಟ್ಟಲು ಆಗುವುದಿಲ್ಲ
  •  ತಾವು ಚೆನ್ನಾಗಿ ಕಾಣಬೇಕೆಂಬ ಯೋಚನೆಗಳುಕಾಡುತ್ತವೆ.
  • , ಸಾಮಾಜಿಕ ಜಾಲತಾಣಗಳ ಪ್ರಭಾವ ಬಹಳ ಇರುತ್ತವೆ.
  •  ಸ್ನೇಹಿತರು ಮತ್ತು ಪರಿಸರದ ಪ್ರಭಾವಗಳು  ಅವರನ್ನು ಹೈರಾಣಾಗಿಸುತ್ತವೆ. 
  • ಇವೆಲ್ಲದರ ನಡುವೆ ಸಮತೋಲನ ಸಾದಿಸುವಷ್ಟು ಅವರಿನ್ನೂ ಪಳಗಿರುವುದಿಲ್ಲ. 
ಅದಕ್ಕೆ ಏನಾದರೂ ಹೇಳಲು ಹೋದರೆ, ಕೂಗಾಡುತ್ತಾರೆ. ಈಗಂತೂ ಅತಿಯಾದ ಮುದ್ದಿನಿಂದ ಬೆಳೆದ ಏಕೈಕ ಮಕ್ಕಳು, ಸ್ವಲ್ಪವೂ ತಾಳ್ಮೆಯಿಲ್ಲದೆ, ಸಂಯಮವೂ ಇಲ್ಲದೇ ಬೇಕಾದಂತೆ ವರ್ತಿಸುತ್ತಾರೆ. ಆದ್ದರಿಂದ ಈ ವಯಸ್ಸಿನ ಮಕ್ಕಳಿರುವ ಮನೆಗಳಲ್ಲಿ ನಿತ್ಯ ವಾಗ್ವಾದ ಅಸಮಾದಾನ ಖಾಯಂ ಎನ್ನುವಂತಾಗಿದೆ.

 ಹೆತ್ತವರು ಸುಮ್ಮನೆ ತಲೆ ಬಿಸಿ ಮಾಡಿ ಪ್ರಯೋಜನವಿಲ್ಲ. 

ಹೆತ್ತವರಿಗೆ ಕಿವಿಮಾತು

  • ಮಕ್ಕಳ ಮನಸನ್ನು ಅರಿಯುವುದು ಬಹಳ ಮುಖ್ಯ. 
  • ನಾವು ಅವರ ವಯಸ್ಸಿನಲ್ಲಿ ಹೇಗಿದ್ದೇವೋ ಹಾಗೆ ಅವರು ಇರಲು ಆಗುವುದಿಲ್ಲ. ಕಾಲ ಬದಲಾಗಿದೆ. ಮಕ್ಕಳೂ ಬದಲಾಗಿದ್ದಾರೆ.ನಾವೂ ಬದಲಾಗಬೇಕಿದೆ. 
  • ನಮ್ಮ ಕಾಲದ ಕಟ್ಟುನಿಟ್ಟಿನ ನಿಯಮಗಳು ಈಗಿನ ಕಾಲಕ್ಕೆ ಪೂರ್ತಿಯಾಗಿ ಹೊಂದಿಕೊಳ್ಳುವುದಿಲ್ಲ. ಆದ್ದರಿಂದ ಅಗತ್ಯ ಬದಲಾವಣೆ ಮಾಡಿಕೊಂಡು, ಮಕ್ಕಳಿಗೆ ಅದನ್ನು ಪಾಲಿಸುವಂತೆ ಹೇಳಬೇಕು. 
  • ಮಕ್ಕಳಿಗೆ ಅತಿಯಾಗಿ ಮುದ್ದು ಮಾಡದೆ, ಸಣ್ಣವರಿರುವಾಗಲೇ ತಿದ್ದಿ ಬುದ್ಧಿ ಹೇಳುವುದನ್ನು ಅಭ್ಯಾಸ ಮಾಡಬೇಕು. 
  • ಜೋರು ಮಾಡಿಯೇ ಹೇಳಬೇಕು ಎಂದೇನಿಲ್ಲ. ಮೃಧುವಾಗಿ, ಸಮಾಧಾನದಿಂದ ಬುದ್ಧಿ ಹೇಳಿದರೆ ಮಕ್ಕಳು ಖಂಡಿತ ಕೇಳುತ್ತಾರೆ. 
  • ಗುರುಹಿರಿಯರಿಗೆ ಹೇಗೆ ಗೌರವ ಕೊಡಬೇಕು ಎಂದು ನಾವು ನಡೆದು ಅವರಿಗೆ ತೋರಿಸಬೇಕಿದೆ.
  •  ದೇವರಮೇಲಿನ ನಂಬಿಕೆ ನಮ್ಮ ಜೀವನಕ್ಕೆ ಎಷ್ಟು ಮುಖ್ಯ ಎಂದು ತಿಳಿಸಬೇಕಿದೆ.
  •  ಶಿಸ್ತು, ಶ್ರದ್ಧೆ,ಪರಿಶ್ರಮಗಳು ಸಾಧನೆಗೆ ಅಡಿಪಾಯ ಎಂದು ಅವರಿಗೆ ತಿಳಿಸಬೇಕಿದೆ. 
  • ಹಣದ ಬೆಲೆ ಏನು? ಗುಣದ ಬೆಲೆ ಏನು? ಎನ್ನುವುದು ಅವರಿಗೆ ಅರ್ಥವಾಗಬೇಕಿದೆ.
  •  ಸರಿ ತಪ್ಪುಗಳ ವ್ಯತ್ಯಾಸ ಅರ್ಥಮಾಡಿಸಬೇಕಿದೆ. 
  • ಸೂಕ್ಷ್ಮ ಸಂವೇದನೆಗಳನ್ನು ಕಲಿಸಬೇಕಿದೆ. 
  • ಹೊಂದಿಕೊಳ್ಳುವ ಗುಣವೂ ಬಹಳ ಮುಖ್ಯ. 
  • ಮನೆಯ ಕೆಲಸಗಳನ್ನೂ ಮಾಡುವ ತಿಳುವಳಿಕೆ,ಆಸಕ್ತಿ, ಜಾಣ್ಮೆಯೂ ಅವರಿಗೆ ಅಗತ್ಯವಿದೆ. 

 ಮಕ್ಕಳು ಹಿರಿಯರು ಹೇಳಿದಂತೆ ಕೇಳಬೇಕು ಎಂಬ ಮಾತು ಈಗಿನ ಕಾಲಕ್ಕೆ ಹೊಂದಿಕೊಳ್ಳುವುದು ತುಸು ಕಷ್ಟ. ಬುದ್ಧಿವಂತರು, 'ಕಾಲಕ್ಕೆ ತಕ್ಕ ಕೋಲ' ಎಂಬಂತೆ ಮಕ್ಕಳ ಅಭಿರುಚಿಗೆ, ಇಷ್ಟಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುತಿದ್ದಾರೆ. ಅದು ನಿಜವಾಗಿ ಇಂದಿನ ಅನಿವಾರ್ಯತೆ.

ಮಳೆ ಕೈಗೆ ಸಿಗದ ಮಾಯಾಮೃಗವಾಗದೆ ಇರಲಿ

 ಮಳೆ ಹೇಗಿತ್ತು

ಸಮಯಕ್ಕೆ ಸರಿಯಾಗಿ ಮಳೆ ಬೆಳೆ ಆಗುತಿದ್ದ ಕಾಲವೊಂದಿತ್ತು. ಇಂತಹ ನಕ್ಷತ್ರದಲ್ಲಿ ಈ ರೀತಿಯ ಮಳೆ ಬರುತ್ತದೆ ಎಂದು ಹಿರಿಯರು ಕರಾರುವಾಕ್ಕಾಗಿ ಹೇಳುತ್ತಿದ್ದರು. ಅದು ಅವರ ಜೀವನಾನುಭವದ ಮಾತಾಗಿತ್ತು. ವಿಶೇಷ ಪರಿಣತಿ, ಆಧುನಿಕ ತಂತ್ರಜ್ಞಾನ ಬೇಕಾಗಿರಲಿಲ್ಲ.ಅವರ ಜೀವನದಂತೆ ಬಹಳ ಶಿಸ್ತು, ಸಂಯಮ ಪಾಲಿಸುತ್ತಿತ್ತು. ಅವರು ಪ್ರಕೃತಿಯ ಜೊತೆ ಹೊಂದಿಕೊಂಡು ಅದನ್ನು ಗೌರವಿಸುತ್ತಾ ಬದುಕುತ್ತಿದ್ದರು. ಅವರ ಲೆಕ್ಕಾಚಾರಗಳು ಎಂದೂ ತಲೆಕೆಳಗಾಗುತ್ತಿರಲ್ಲ. ಬದುಕು ತುಂಬಾ ಸರಳ ಸುಂದರವಾಗಿತ್ತು.

ಇಂದು ಏನಾಗಿದೆ ಮಳೆಗೆ?

ನಮ್ಮ ಬುದ್ದಿವಂತಿಕೆ ನಮಗೇ ಮುಳುವಾಗಿದೆ. ಪ್ರಕೃತಿಯ ಜೊತೆ ಹೊಂದಿಕೊಂಡು, ಅಗತ್ಯ ಬದಲಾವಣೆಗಳನ್ನು ನಮ್ಮಲ್ಲಿ ಮಾಡಿಕೊಳ್ಳುವ ಬದಲು ಪ್ರಕೃತಿಯನ್ನೇ ಬದಲಾಯಿಸಲು ಹೊರಟಿದ್ದೇವೆ. ನಾವು ಅಂದುಕೊಂಡ ಪಲಿತಾಂಶವನ್ನಷ್ಟೇ ಕೊಡಲು ಅದೇನು ಕಂಪ್ಯೂಟರ್ ಪ್ರೋಗ್ರಾಮಿಂಗ್ ಅಲ್ಲ. ನಿರ್ಜೀವ ವಸ್ತುವಲ್ಲ.  ತನ್ನ್ನದೇ ಜೀವಂತಿಕೆಯಿಂದ ಬದುಕುತ್ತಾ ,  ತನ್ನ ನಿಯಮಗಳನ್ನು ತಾನೇ ರೂಪಿಸುತ್ತ ಸ್ವತಂತ್ರವಾಗಿ ಬದುಕುತ್ತಿರುವ ಜೀವವಾಹಿನಿ ಅದು. ನಮ್ಮ ಮಧ್ಯಪ್ರವೇಶ ಅದಕ್ಕೆ ಇಷ್ಟವಾಗುವುದಿಲ್ಲ. ಅದನ್ನರಿಯದ ಪರಮ ಮೂರ್ಖರು ನಾವು.  ಕೊನೆಗೆ, ಏನು ಮಾಡಲು ಹೋಗಿ... ಏನು ಮಾಡಿದೆ ನೀನು ಎಂದು ಹಾಡುವಂತೆ ಆಗುತ್ತದೆ.  ನಮ್ಮ ಅನಗತ್ಯ ಮಧ್ಯಸ್ಥಿಕೆಯಿಂದ ಪ್ರಕೃತಿಯ ಸಮತೋಲನ ತಪ್ಪಿ ಹೋಗಿದೆ. ಇನ್ನಾದರೂ ಮೌನವಾಗಿ ಪ್ರಕೃತಿಯ ಆದೇಶಗಳನ್ನು ಪಾಲಿಸೋಣ .  ಮಳೆಗಾಗಿ ಜಾತಕಪಕ್ಷಿಯಂತೆ ಕಾಯುವ ಸಂಕಟ ತಪ್ಪಲಿ . ಮಳೆಗಾಲ ಶುರುವಾದ ಮೇಲೆ ಎಲ್ಲಿ ಏನಾಗುವುದೋ ಎಂಬ ಭಯ ತಪ್ಪಲಿ .  ಬಿರುಗಾಳಿ, ಅತಿವೃಷ್ಟಿ, ಗುಡ್ಡಕುಸಿತ ನಿಲ್ಲಲಿ..  ಗುಡುಗು ಸಿಡಿಲು ನಿಲ್ಲಲಿ. ಮಳೆಯಾರ್ಭಟ ಕಡಿಮೆಯಾಗಲಿ , ಎಂದೆಲ್ಲ ಬಯಸುವ ನಾವು ಅದಕ್ಕಾಗಿ ಪ್ರಯತ್ನಿಸೋಣ . ಮೌನವಾಗಿ ಪ್ರಕೃತಿಯ ಆಗುಹೋಗುಗಳನ್ನು ಗಮನಿಸೋಣ. ಮಳೆಗಾಗಿ ಕಾಯೋಣ , ಕೃತಕ ಮಳೆ ಬೇಡ.. ಕೃತಕ ನೆರೆ , ಮತ್ತದರ ಬರೆ ಯಾವುದೂ ಬೇಡ. ಮೌನವಾಗಿ ಕಾಯೋಣ ಮಾಡಿದ ತಪ್ಪುಗಳಿಗಾಗಿ. ಮಳೆ ಬೇಕಾದಾಗ ಬಾರದೆ, ಬಂದಾಗ ಅತಿಯಾಗಿ ಬಂದು ತಲ್ಲಣ ಸೃಷ್ಟಿಸುತ್ತಿದೆ. ಅನಾಹುತಗಳ ಸರಮಾಲೆಯನ್ನು ಉಂಟುಮಾಡುತ್ತಿದೆ. ಕೈಗೆಟುಕದ ನಕ್ಷತ್ರದಂತೆ, ಮಳೆ ಮಾಯಾಮೃಗವಾಗದಿರಲಿ!  ಮನಪೂರ್ವಕವಾಗಿ ಬೇಡೋಣ .... 






CBSEಯಿಂದ ಸ್ಟೇಟ್ ಬೋರ್ಡ್ ಗೆ

ಈಗೀಗ ಹೆಚ್ಚಾಗಿ ಮಕ್ಕಳು 10ನೇ ತರಗತಿಯವರೆಗೆ CBSE ಬೋರ್ಡಿನಲ್ಲಿ ಕಲಿಯುತ್ತಾರೆ. ಕೆಲವೊಂದು ವಿದ್ಯಾರ್ಥಿಗಳು ಪಿಯುಸಿಯನ್ನು ಅದೇ ಬೋರ್ಡಿನಲ್ಲಿ ಮುಂದುವರೆಸುತ್ತಾರೆ. ಹೆಚ...